
13th May 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಮನುಷ್ಯಜೀವನದಲ್ಲಿರುವ ಮೂಲ ಭೂತ ಸೌಕರ್ಯಗಳಾದ ಅನ್ನ, ಬಟ್ಟೆ, ವಸತಿ, ಶಿಕ್ಷಣದ ಜೊತೆಗೆ ಸಂಸ್ಕಾರ ಉಳಿಸಿ, ಬೆಳೆಸಿಕೊಂಡು ಹೋಗುವ ಕಾರ್ಯಕ್ಕೂ ದುಡಿಯಬೇಕಿದೆ. ಈ ನಿಟ್ಟಿನಲ್ಲಿ ದುಡಿಯುವ ಕಾರ್ಯ ನಮ್ಮದಾಗಲಿ ಎಂದು ಕಸಾಪ ಬೆಂಗಳೂರಿನ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್.ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಭವನದಲ್ಲಿ ರವಿವಾರ ನಡೆದ ಕನ್ಡನ ಸಾಹಿತ್ಯ ಪರಿಷತ್ತಿನ ೧೧೧ನೇ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕ.ಸಾ.ಪ ದುಡೀತಾಇದೆ. ಮೊದಲು ಕರ್ನಾಟಕ ಸಾಹಿತ್ಯ ಪರಿಷತ್ ಹೆಸರಿನಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತು ೧೧೧ ವಸಂತಗಳನ್ನು ದಾಟಿದೆ. ೧೯೫೮ನೇ ಸಾಲಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ನ್ನು ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣ ಮಾಡಲಾಯಿತು. ಕೇಂದ್ರ ಸಾಹಿತ್ಯ ಪರಿಷತ್ ವತಿಯಿಂದ ೮೭ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗಿದೆ. ೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಸಾಹಿತ್ಯ ಪರಿಷತ್ನಲ್ಲಿ ಸುಮಾರು ೧೭೫೦ ಸಾವಿರ ಪುಸ್ತಕಗಳ ಭಂಡಾರವಿದೆ. ದೇಶದಲ್ಲಿಯೇ ಅತಿ ಹಳೆಯದಾದ, ಬ್ರಹತ್ ಪರಿಷತ್ ಕನ್ನಡ ಸಾಹಿತ್ಯ ಪರಿಷತ್ ಆಗಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ಮಂಡಿಸಿದ ಹಿರಿಯ ಸಾಹಿತಿ ವಿರಶೆಟ್ಟಿ ಬಾವುಗೆ, ಭಾಲ್ಕಿಯಲ್ಲಿ ಇದುವರೆಗೆ ೧೦ಜನ ಕಸಾಪ ಅಧ್ಯಕ್ಷರಾಗಿದ್ದಾರೆ, ಆದರೆ ಕೇವಲ ೬ ತಾಲೂಕು ಮಟ್ಟದ ಸಮ್ಮೇಳನಗಳನ್ನು ನಡೆಸಲಾಗಿದೆ. ಸದ್ಯದ ಅಧ್ಯಕ್ಷರು ಆದಷ್ಟುಬೇಗ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ತಾಲೂಕಿನಲ್ಲಿ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಹಾಗು ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ದಾರಿಯ ಬಗ್ಗೆ ಮಾತನಾಡಿದರು.
ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಹಣಮಂತ ಕಾರಾಮುಂಗೆ ಆಶಯ ನುಡಿ ನುಡಿದರು. ಇದೇವೇಳೆ ಬಿಆರ್ಪಿ ಚೇತನಾ ಚನಶೆಟ್ಟಿ ರಚಿಸಿದ ನವಚೇತನ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಸುಭಾಷ ಹುಲಸೂರೆ, ನೇಕಾರ ಸಮಾಜದ ಗೌರವಾಧ್ಯಕ್ಷ ಬಾಬುರಾವ ಖ್ಯಾಡೆ, ಭದ್ರೇಶ ಗುರಯ್ಯಾ ಸ್ವಾಮಿ, ಚಂದ್ರಕಾAತ ತಳವಾಡೆ, ಅಕ್ಷಯಕುಮಾರ ಮುದ್ದಾ, ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ.ಪಾಟೀಲ, ಜಯರಾಜ ದಾಬಶೆಟ್ಟಿ, ಸಂತೋಷಕುಮಾರ ಚನಶೆಟ್ಟಿ ಉಪಸ್ಥಿತರಿದ್ದರು.
ಭದ್ರೇಶ ಸ್ವಾಮಿ ಸ್ವಾಗತಿಸಿದರು. ಹಣಮಂತ ಕಾರಾಮುಂಗೆ ನಿರೂಪಿಸಿದರು. ಸಂತೋಷ ಬಿಜಿಪಾಟೀಲ ವಂದಿಸಿದರು.